ಬಾಲಕಲಾವಿದರ ವಚೋವಿಲಾಸ
ಲೇಖಕರು : ಬಿ. ವಿಠಲ ರಾವ್
ಶುಕ್ರವಾರ, ಸೆಪ್ಟೆ೦ಬರ್ 11 , 2015
|
ಸೆಪ್ಟೆ೦ಬರ್ 11, 2015
|
ಬಾಲಕಲಾವಿದರ ವಚೋವಿಲಾಸ
ಉಡುಪಿ :
ಶ್ವೇತ ವಸ್ತ್ರಧಾರಿ ಕಲಾವಿದರವರು. ಎಲ್ಲರೂ ಆಂಗ್ಲಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿರುವ ಪ್ರತಿಭಾನ್ವಿತರು. ಆದರೆ ಎರಡೂವರೆ ಗಂಟೆಗಳ ಕಾಲ ಈ ಮಕ್ಕಳು ಒಂದೇ ಒಂದು ಆಂಗ್ಲ ಪದ ಬಾರದಂತೆ ಅಚ್ಚಗನ್ನಡದಲ್ಲಿ ಮಾತಿನಸೌಧವನ್ನು ಕಟ್ಟಿ, ಎಲ್ಲರ ಮುಕ್ತ ಪ್ರಶಂಸೆಗೆ ಪಾತ್ರರಾದರು.
ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ 19ನೇ ಚಾತುರ್ಮಾಸ್ಯ ವ್ರತಾಚರಣೆ ನಿಮಿತ್ತ ಸೆ.5ರಂದು ಶ್ರೀ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಮಠದಲ್ಲಿ ನಡೆದ ಸಾಂಸ್ಕೃತಿಕ ವೈಭವದಲ್ಲಿ ಯಕ್ಷಲೋಕದ ಅಪರೂಪ ಹಾಗೂ ಅಪೂರ್ವವಾದ ಕಥಾನಕ ಶ್ರೀರಾಮ ನಿರ್ಯಾಣ ಪ್ರಸಂಗವನ್ನು ಯಥೋಚಿತ ಅರ್ಥಗಾರಿಕೆಯಿಂದ ಶ್ರೀಮಂತ ಗೊಳಿಸಿದವರು ಪುತ್ತೂರಿನ ಬೆಳುವಾರಿನಲ್ಲಿರುವ ಮಕ್ಕಳ ಮನೆಯ ಆಶ್ರಯದಲ್ಲಿ ಬೆಳೆದ ಮಧುರ ಯಕ್ಷ ಸೇವಾ ಸಂಘದ ಮಕ್ಕಳ ತಂಡದ ಬಾಲಕಲಾವಿದರು.
ಪ್ರೈಮರಿ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳಾದ ಇವರಿಗೆ ವೇದಿಕೆ ಏರಿ ಸಮರ್ಥವಾಗಿ ಪಾತ್ರ ಪೋಷಣೆ ಮಾಡಲು ನಿರ್ದೇಶನ ನೀಡಿದವರು ಸಾಲ್ಮರ ಪ್ರೌಢಶಾಲೆಯ ಗಣಿತ ಶಿಕ್ಷಕ, ಯಕ್ಷಪ್ರೇಮಿ ಬಿ. ಭಾಸ್ಕರ ಶೆಟ್ಟಿ. ಇವರ ಶ್ರಮ ವೇದಿಕೆಯಲ್ಲಿ ಸಾಕಾರಗೊಂಡು ಪ್ರತಿಭೆಯ ಪ್ರತಿಫಲನವಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ.
ಹಿಮ್ಮೇಳದಲ್ಲಿ ಗೋವಿಂದನಾಯಕ್ ಪಾಲೆಚ್ಚಾರು ಅವರ ಹಾಡುಗಾರಿಕೆಗೆ ಮದ್ದಳೆಯಲ್ಲಿ ಸಾಥ್ ನೀಡಿದವರು ಟಿ.ಡಿ. ಗೋಪಾಲಕೃಷ್ಣ. ಚೆಂಡೆವಾದಕರಾಗಿ ಸಹಕರಿಸಿದವರು ಮುರಳಿ ಕಲ್ಲೂರಾಯ ಹಾಗೂ ಬಾಲಕಲಾವಿದ ಅಚಿಂತ್ಯಕೃಷ್ಣ. ಶ್ರೀರಾಮನಾಗಿ ಚಿನ್ಮಯ ಬೇರಿಕೆ, ಕಾಲಪುರುಷನಾಗಿ ರಾಹುಲ್ ರಾವ್, ಲಕ್ಷ್ಮಣನಾಗಿ ಶ್ರೀಹರ್ಷ, ದೇವೇಂದ್ರನಾಗಿ ಲಕ್ಷ್ಮೀಶ ಉತ್ತಮವಾಗಿ ಪಾತ್ರಪೋಷಣೆ ಮಾಡಿದರು. ದೂರ್ವಾಸನಾಗಿ ಸುಜ್ಞಾನ ಹೇರಳೆ, ಊರ್ಮಿಳೆಯಾಗಿ ಅಚಿಂತ್ಯಕೃಷ್ಣ, ನಾರದ ಹಾಗೂ ಹನುಮಂತವಾಗಿ ಶ್ರೀನಂದ ಗಮನಸೆಳೆದರು. ಕಳೆದ ನಾಲ್ಕು ವರ್ಷಗಳಿಂದ ಸುಬ್ರಹ್ಮಣ್ಯ ಶ್ರೀಪಾದರ ಚಾತುರ್ಮಾಸ್ಯದ ವೇಳೆ ಯಕ್ಷಗಾನ ತಾಳಮದ್ದಳೆಯನ್ನು ನೀಡುತ್ತಾ ಬಂದಿರುವ ಈ ಮಕ್ಕಳ ತಂಡಕ್ಕೆ ನಿರಂತರ ವೇದಿಕೆ ಒದಗಿಸುತ್ತಿರುವ ಶ್ರೀಮಠದ ಕಲಾಪ್ರೇಮ ಶ್ಲಾಘನೀಯ. ಪೌರಾಣಿಕ ಪ್ರಸಂಗಗಳನ್ನು ಜನಮಾನಸಕ್ಕೆ ಪಸರಿಸುತ್ತಿರುವ ಈ ಮಕ್ಕಳ ತಂಡದ ಶ್ರಮವೂ ಮೆಚ್ಚತಕ್ಕದ್ದೇ.
ಕೃಪೆ :
udayavani.com
|
|
|